15 May, 2012

"ಒಳ್ಳೆಯವರಿಗೆ ಒಳ್ಳೆಯವರು ಸಿಗುತ್ತಾರೆ"

ಈಗ ತಾನೆ ನಾನು ಕೆಲಸ ಮಾಡುತಿದ್ದ ನನ್ನ ಕಾಲೇಜಿಗೆ ಹೋಗಿ ಬಂದೆ. "ಓ ನನ್ನ ಹಳೆಯ ಕಾಲೇಜು,ಈಗ ನನ್ನದಲ್ಲ !"
ಕಾಲಿಟ್ಟದ್ದೇ ಅಲ್ಲಿರುವ ಪರಿಚಿತರೂ ಒಂದು ಸಲಕ್ಕೆ ಅಪರಿಚಿತರಂತೇ ಕಂಡಿತು. ನಾನು ಚಪ್ಪಲಿಡುವಲ್ಲಿ ಯಾವುದೋ ಹೊಸ ಚಪ್ಪಲುಗಳು, ನಾನು ಪುಸ್ತಕವಿರಿಸುತ್ತಿದ್ದ ಕಪಾಟಿನಲ್ಲಿ ಬೇರೆ ಯಾವುದೋ ಪುಸ್ತಕಗಳು, ನಾನು ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನೂ ಇನ್ಯರೋ ಆಕ್ರಮಿಸಿರದ್ದಾರೆ,ಯಾವುದೋ ಹೊಸ ಮುಖ , ನನ್ನ ಸ್ಥಾನವೆಲ್ಲಿ? ಒಂದು ಕ್ಷಣ ಹುಡುಕಾಡಿದೆ. ಮತ್ತೆ ತಿಳಿಯಿತು ಅಲ್ಲಿರುವವರಿಗೆ ನಾನೇ ಅಪರಿಚಿತಳು, ಹೊಸಬಳು. ಯೋಚಿಸಿದಾಗ ತುಸು ದುಃಖವಾಯಿತು.

ಈ ಕಾಲೇಜಿಗೆ ಸೇರುವಾಗ ಅಲ್ಲಿರುವ ಎಲ್ಲರೂ ಹೊಸಬರು, ಅಪರಿಚಿತರು. ಆಳ್ವಾಸ್ ಕಾಲೇಜನ್ನು ಬಿಟ್ಟು ಬಂದ ದಿನಗಳವು. ನನ್ನ ಬಳಗವನ್ನು ಬಿಟ್ಟು ಬಂದ ದುಃಖ. ಅಲ್ಲಿಯ ವಿದ್ಯಾರ್ಥಿಗಳು, ಅಲ್ಲಿಯ ಪರಿಸರಕ್ಕೆ ಒಗ್ಗಿ ಹೋಗಿದ್ದೆ. ಹಾಗಾಗಿ ಇಲ್ಲಿ ಸೇರಿದಾಗ ಪ್ರತಿಯೊಂದರಲ್ಲಿಯೂ ಆಳ್ವಾಸ್ ನ್ನು ಹುಡುಕಲು ತೊಡಗಿದೆ. ಇಲ್ಲಿರುವ ರೀತಿ-ನೀತಿ, ನಡತೆಗಳೆಲ್ಲ ಸರಿಯಿಲ್ಲದಂತೆ ತೋರಿತು. ಅಲ್ಲಿದ್ದಾಗ ದಿನವಿಡೀ ಹರಟಿದರೂ ಸುದ್ದಿ ಹೇಳಿ ಮುಗಿಯದಂತ ಗೆಳತಿಯರು, ಇಲ್ಲಿ ಒಂದೈದು ನಿಮಿಷ ಮಾತಡಲು 'ನನ್ನವರು' ಎನ್ನುವ ವ್ಯಕ್ತಿಗಳು ಯಾರೂ ಇಲ್ಲ ಅನ್ನುವ ಭಾವನೆ.ಸುಮಾರು ಒಂದು ತಿಂಗಳ ಕಾಲ "ಯಾಕಾದರೂ ಬಂದು ಸೇರಿದೆನಪ್ಪಾ ಈ ಕಾಲೇಜಿಗೆ" ಅನ್ನುವ ಭಾವ.
ಆದರೆ ದಿನ ಹೋದಂತೆ ನಾನು ಹಲವು ಸಂಗತಿಗಳನ್ನು ಕಲಿತೆ. ಸಣ್ಣ ಕಾಲೇಜಾದರೂ ಕಲಿಯುವುದು ಬಹಳಷ್ಟಿದೆ ಅನ್ನುವುದು ತಿಳಿಯಿತು. ಅದಕ್ಕಿಂತ ಮುಖ್ಯವಾಗಿ ಎಂದೆಂದೂ ಮರೆಯಲು ಸಾಧ್ಯವಿಲ್ಲ ಅನ್ನುವ ಇಬ್ಬರು ಗೆಳತಿಯರು. ಒಬ್ಬರಂತೂ ಅಕ್ಕನಂತೆ!
ಇಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡಿ, ಅಮೇರಿಕವನ್ನು ನೋಡಿದ,ಸುತ್ತಿದ ಅನುಭವ ಅವರದು. ಆದರೂ ಎಂತಹ ಸರಳತನ. ಅದರಲ್ಲೂ ಪುಸ್ತಕ ಓದುವ ಆಸಕ್ತಿಯನ್ನು ನೋಡಿ ದಂಗಾದೆ. ನಮ್ಮ ಮನೆಯಲ್ಲಿರುವ ಹಲವು ಪುಸ್ತಕಗಳನ್ನು ಅವರಾದರೂ ಓದಿದ ಸಂತೋಷ ನನಗೆ. "ಚಾಣಕ್ಯ"." ಆವರಣ"," ಪಾಚಿ ಕಟ್ಟಿದ ಪಾಗಾರ", ವಸುಧೇಂದ್ರರ ಹಲವು ಪುಸ್ತಕಗಳನ್ನು ಅವರು ಓದಿದ ಮೇಲೆ ನಮ್ಮಲ್ಲಿ ನಡೆಯುತ್ತದ್ದ ಚರ್ಚೆ ಎಷ್ಟೊಂದು ಖಷಿ ಕೊಡುತ್ತಿತ್ತು. ಏನಿಲ್ಲವೆಂದರೂ ಮಧ್ಯಾಹ್ನದ ವೇಳೆ ನಾವು ಮೂವರು ಒಟ್ಟಿಗೆ ಕುಳಿತು ಹರಟುತ್ತಾ ಹಂಚಿಕೊಂಡು ಊಟ ಮಾಡುವ ಸವಿ ಈಗ ನೆನಪು ಮಾತ್ರ.  ಅಲ್ಲದೆ ಸಿನೆಮಾ. ರಾಜಕೀಯ, ಸಂಸಾರದ ಕತೆಗಳು, ಕಾಲೇಜಿನಲ್ಲೇ ನಡೆಯುವ ವಿಷಯಗಳ ಗಾಸಿಪ್ ಗಳು, ಕೆಲವು ತುಘಲಕ್ ನಂತಹ ನೀತಿಗಳು, ತಮಾಷೆಗಳು...ಹೀಗೆ ಪ್ರತಿಯೊಂದಕ್ಕೂ ಸಾತ್ ನೀಡುತ್ತಿದ್ದ ಆ ಇಬ್ಬರು ಆಪ್ತ ಸ್ನೇಹಿತರು ತುಸು ದೂರವಾದರಲ್ಲ ಅನ್ನುವ ಖೇದ.

ಹೌದು... ನೀರು, ಗಾಳಿ, ಕಾಲಕ್ಕೆ ತಡೆಯೊಡ್ಡಲು ಸಾಧ್ಯವಿಲ್ಲ. ಹಾಗೆ ನಮ್ಮ ಬದುಕಿನಲ್ಲೂ ಹಲವಾರು ಬದಲಾವಣೆಗಳು ಬಂದೇ ಬರುತ್ತವೆ. ಒಪ್ಪಿಕೊಂಡು ಬದುಕುವ ರೀತಿ ನಮ್ಮದಾಗಿರಬೇಕಷ್ಟೆ. 'ನಾನಿಲ್ಲ' ಅಂದ ಮಾತ್ರಕ್ಕೆ ಈ ಸಾಮಾಜಿಕ ವ್ಯವಸ್ಥೆ ನಿಲ್ಲುವುದಿಲ್ಲ. ಆದರೆ 'ನಾನಿದ್ದಾಗ' ನಡೆದ ಘಟನೆ, ಅನುಭವ ಮಾತ್ರ ಶಾಶ್ವತ. ಆ ನೆನಪುಗಳನ್ನು ಮೆಲುಕು ಹಾಕುತ್ತಾ ಬದುಕುವ ರೀತಿ ಮಾತ್ರ ಸುಂದರ.

"ಒಳ್ಳೆಯವರಿಗೆ ಒಳ್ಳೆಯವರು ಸಿಗುತ್ತಾರೆ" ಅನ್ನುವ ನನ್ನ ಅಮ್ಮನ ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ.

   


13 May, 2012

ದೂರ ಸರಿದ ಬರಹ

ಹಾಗೆ ನೋಡಿದರೆ ಬ್ಲಾಗ್ ನಲ್ಲಿ ಬರೆಯದೆ ಮೂರು ವರ್ಷಗಳಾದುವು.ಬರಹ ನನ್ನಿಂದ ಕೈ ತಪ್ಪಿ ಹೋಯಿತೇನೋ ಅಂದುಕೊಂಡೆ...
ಈ ಮೂರು ವರ್ಷ ಅದೆಷ್ಟು ಸುಲಭದಲ್ಲಿ ಕಳೆದು ಹೋಯಿತೋ? ಕಾಲ ಯಾರಿಗೂ ನಿಲ್ಲುವುದಿಲ್ಲ. ನಿಲ್ಲುವುದೇನಿದ್ದರೂ ನಾವು ಮಾಡಬೇಕಾದ ಕೆಲಸ ಕಾರ್ಯಗಳಷ್ಟೇ. ಹಾಗೆ ನನ್ನಲ್ಲಿ ಬರಹ!!!
ತಿರುಗಿ ನೋಡಿದರೆ ಈ ಮೂರು ವರ್ಷ ನಾನು ಮಾಡಿದ ಮಹಾನ್ ಸಾಧನೆಯಾದರೂ ಏನು?
ಎರಡು ವರುಷ "ಆಳ್ವಾಸ್ ವಿದ್ಯಾ ಸಂಸ್ಥೆ"ಯಲ್ಲಿ ದುಡಿದೆ, ನಂತರದ ಪಯಣ ಬೆಂಗಳೂರು. ಇಲ್ಲೂ "ಕೆಬಿಸಿ" ಅನ್ನುವ ಪುಟ್ಟ ಕಾಲೇಜಿನಲ್ಲಿ ಉಪನ್ಯಾಸ. ನಾನು ಗಳಿಸಿಕೊಂಡದ್ದಾದರೂ ಏನು? 'ಎಲ್ಲಿ ಹೋದರೂ ಬದುಕಬಲ್ಲೆ ಅನ್ನುವ ಆತ್ಮವಿಶ್ವಾಸವೋ? ಅಹಂಕಾರವೋ?' ನಾನರಿಯೆ!!!
ಒಂದಂತೂ ಸತ್ಯ- ನಾನು ಗಳಿಸಿದ್ದು ನನ್ನದೇ ಆದ ದುಡ್ಡು, ಪ್ರೀತಿಸುವ ವಿದ್ಯಾರ್ಥಿಗಳು(ನನ್ನ ಭಾವನೆ), ಉತ್ತಮರಲ್ಲಿ ಉತ್ತಮರೆನಿಸುವ ಕೆಲವು ಗೆಳಯ/ಗೆಳತಿಯರು.ನಾಲ್ಕು ಜನರ ಮುಂದೆ ಖುಷಿಯಿಂದ ಮಾತಾಡುವ ಶಕ್ತಿ...
ಸದ್ಯ ನಿರುದ್ಯೇಗಿಯಾಗಿದ್ದು ಮನೆ ಕೆಲಸ!!
ಹಾಗಂತ ಕೆಲಸ ಸಿಗಲಾರದು ಅನ್ನು ಹತಾಶೆ ಇನ್ನೂ ನನಗೆ ಬಂದಿಲ್ಲ...
ಈ ಹೊತ್ತಿನಲ್ಲಿ ನೆನಪಾದುದು ಈ ಬರಹ. ಈ ಮಧ್ಯೆ ನನಗಾದ ಹಲವಾರು ಅನುಭವಗಳನ್ನ ಬರೆಯಬೇಕೆಂದು ಅಂದುಕೊಂಡದ್ದು ಮಾತ್ರ.ಬರೆಯಲು ತುಸು ಆಲಸ್ಯ.. ಇನ್ನಾದರೂ ನನಗಾದ ಅನುಭವಗಳನ್ನ ದಾಖಲುಗೊಳಿಸುತ್ತಾ ಹೋಗುತ್ತೇನೆ. ನೀವು ಓದಲೇಬೇಕೆಂಬ ಒತ್ತಾಸೆಯಂತೂ ಖಂಡಿತಾ ನನ್ನಲಿಲ್ಲ...

01 June, 2009

ಫ್ರುಟ್ ಫುಲ್ ಡೆಲ್ಲಿ ವಾಸ...

ದಿಲ್ಲಿಗೆ ಬಂದು ತಪ್ಪು ಮಾಡಿದೆನೋ ಅಂತ ಅದೆಷ್ಟೋ ಸಲ ಅನ್ನಿಸಿತ್ತು. ಗೆಳೆಯ/ತಿ ಯರಿಲ್ಲ, ಊರೂ ಗೊತ್ತಿಲ್ಲ. ಸಹಿಸಲಾಗದ ಸೆಕೆ. ಚಳಿ ಅಂತ ಒದ್ದಾಡುವ ಬದಲು ಮಂಗಳೂರಲ್ಲೇ ಇದ್ದಿದ್ದರೆ ಆರಾಮಾಗಿರಬಹುದಿತ್ತು ಅಂತ. ಆದರೆ ಈ ಹಣ್ಣುಗಳ ರಾಶಿ ನೋಡುವಾಗ ಊರು, ಮನೆ, ಯಾವೂದೂ ನೆನಪಾಗುವುದಿಲ್ಲ. ಕೇವಲ ಅದರ ಸವಿಯಾದ ಸಿಹಿಯಷ್ಟೇ ಬಾಯಲ್ಲಿ ನೀರೂರಿಸುವುದು.

ದಿಲ್ಲಿಯಲ್ಲಿ ಸಾಮಾನ್ಯ ಎಲ್ಲಾ ಸೀಝನ್ ಗೂ ಒಂದೊಂದು ಹಣ್ಣುಗಳು ಖಾಯಂ. ನಾನು ಕಳೆದ ವರ್ಷ ದಿಲ್ಲಿಗೆ ಬಂದಾಗ ಇಲ್ಲಿ ಮಾವಿನ ಹಣ್ಣಿನ ಸಮಯ. ನಮ್ಮ ಊರಿಗಿಂದ ಲೇಟಾಗಿ ಇಲ್ಲಿ ಮಾವಿನ ಹಣ್ಣು ಮಾರ್ಕೆಟ್ಟಿಗೆ ಬರುವುದಾದರೂ ರುಚಿ ಮಾತ್ರ ಅದ್ಭುತ. ನಾನು ಊರಲ್ಲಿದ್ದಾಗಲೂ ತಿನ್ನದಿದ್ದಷ್ಟು ಮಾವಿನ ಹಣ್ಣು ತಿಂದು ಗೊರಟು ಬಿಸಾಡಿದ್ದಿದೆ. ದಿಲ್ಲಿಯ ಪ್ರಗತಿ ಮೈದಾನದಲ್ಲಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಟ್ಟದ ಮಾವಿನ ಹಣ್ಣಿನ ಮೇಳ ನಡೆಯುತ್ತದೆ. ಅಲ್ಲಿಗೆ ಲಖನೌ, ಕಾನ್ಪುರ, ಉತ್ತರಪ್ರದೇಶ ಹೀಗೆ ಹಲವು ಕಡೆಯ ಸುಮಾರು ೬೦೦ ಕ್ಕೂ ಮಿಗಿಲಿನ ವಿವಿಧ ನಮೂನೆಯ, ಜಾತಿಯ ಹಣ್ಣುಗಳು ನೋಡಲು ಮತ್ತು ದುಡ್ಡುಕೊಟ್ಟರೆ ಸವಿಯಲೂ ಸಿಗುತ್ತದೆ.

ಶಿಮ್ಲಾ, ಮಸ್ಸೂರಿ, ನೈನಿತಾಲ್, ಕಾಶ್ಮೀರ ಹಾಗೇ ಉತ್ತರಪ್ರದೇಶ, ಹರ್ಯಾಣ, ಹೀಗೆ ಚಳಿ ಮತ್ತು ಸೆಕೆ ಎರಡೂ ವತಾವರಣವಿರುವ ಪ್ರದೇಶಕ್ಕೆ ಸೆಂಟರ್ ಪ್ಲೇಸ್ ದಿಲ್ಲಿ. ಆದ್ದರಿಂದ ಇಲ್ಲಿಗೆ ಅಲ್ಲೆಲ್ಲ ಬೆಳೆಯುವ ಹೆಚ್ಚಿನ ಹಣ್ಣು ತರಕಾರಿಗಳು ಬರುತ್ತವೆ. ಹಾಗಾಗಿ ದಿಲ್ಲಿಯಲ್ಲಿ ಕೂತು ತಿನ್ನುವವರಿಗೆ ಪರ್ಮನೆಂಟಾಗಿ ಒಂದಲ್ಲಾ ಒಂದು ಹಣ್ಣುಗಳು.
ಈ ಸಲ ಊರಿಂದ ಬರುವಾಗ ೪೩ ಡಿಗ್ರಿ ಸೆಲ್ಶಿಯಸ್ ನಷ್ಟು ಸೆಕೆ. ಆದರೆ ಫ್ರಿಡ್ಜಲ್ಲಿ ತಂಪಾದ ಬಚ್ಚಂಗಾಯಿ(ಕಲ್ಲಂಗಡಿ). ಇದು ನಮ್ಮ ಊರಲ್ಲೂ ಸಿಗುತ್ತದೆ ಅಂದರೂ ಕೆಜಿಗೆ ೫ ರೂಪಾಯಿಯಂತೆ ಸಿಗಲು ಸಾಧ್ಯವಿಲ್ಲ ಅಲ್ಲವೇ?

ಕಡಿಮೆ ದರಕ್ಕೆ ಸಿಗುವುದರಿಂದ ಹೆಚ್ಚು ರುಚಿ!

ಮೊನ್ನೆ ಮೊನ್ನೆ ಮಾರ್ಕೆಟ್ಟಿಗೆ ಹೋದಾಗ ಅಕಸ್ಮತ್ತಾಗಿ ಕಂಡದ್ದು ಕೆಂಪು ಹಣ್ಣು. ಅದೇನೆಂದು ವಿಚಾರಿಸಿದಾಗ ಗೊತ್ತಾದದ್ದು ಲಿಚೀ! ಮಂಗಳೂರಲ್ಲಿ ಐಡಿಯಲ್ ಐಸ್ ಕ್ರೀಂ ಪಾರ್ಲರ್ ನಲ್ಲಿ ನನ್ನ ತಂಗಿಯ ಜೊತೆ ಲಿಚೀ ಫ್ಲೇವರ್ ಇರುವ ಐಸ್ ಕ್ರೀಂ ಒಮ್ಮೆ ತಿಂದಿದ್ದರೂ ರುಚಿ ಗೊತ್ತಾಗಿರಲಿಲ್ಲ. ಇಲ್ಲಿಯ ತನಕ ಕಣ್ಣಿನಿಂದ ನೋಡಿರಲೂ ಇರಲಿಲ್ಲ. ಮನೆಗೆ ತಂದು ತಿಂದಾಗಲೇ ಗೊತ್ತಾದದ್ದು ಅದರ ಅದ್ಭುತ ಸವಿ. ಸುಮಾರಾಗಿ ನಮ್ಮ ಕುಡ್ಲದ ತಾಳಿಬೊಂಡ(ಈರೋಳು)ವನ್ನು ನೆನಪಿಗೆ ತರುವ ಹಣ್ಣು.

ಹಾಗೇ ಇನ್ನೊಂದು ಹಣ್ಣು ಕರ್ಬೂಜ. ಇದರ ಜ್ಯೂಸ್ ಅಂತೂ ಅದ್ಭುತ. ಅದರಲ್ಲೂ ಸನ್ ಮೆಲನ್, ಮಸ್ಕ್ ಮೆಲನ್ ಎಂಬೆಲ್ಲ ವಿಧವಿಧ ಹಣ್ಣುಗಳು. ತುಂಬ ರಸಭರಿತ ಹಣ್ಣು. ಬಾಯಿಗಿಟ್ಟರೆ ಸಾಕು ಹಾಗೇ ಕರಗಿಹೋಗುತ್ತದೆ. ನನ್ನ ಪತಿ ‘ಅದು ಮಸ್ಕ್ ಮೆಲನ್ ಅಲ್ಲ ಮಸ್ತ ಮೆಲನ್’ ಎಂಬ ಹೊಸ ನಾಮಕರಣ ಮಾಡಿದ್ದರು.

ಲಿಚೀ ಮುಗಿದ ಮೇಲೆ ರಸಭರಿತ ಮಾವು ಅದರ ನಂತರ ಪಿಯರ್ ಫ್ರುಟ್. ೯ ನೇ ತರಗತಿಯಲ್ಲಿದ್ದಾಗ ನನ್ನ ಮಾವ ಬಾಂಬೆಯಿಂದ ಬಂದಾಗ ತಂದಿದ್ದರು ಈ ಪಿಯರ್. ಆಗ ಅಜ್ಜಿಮನೆಯಲ್ಲಿ ನಾವು ರಾಶಿ ಮಕ್ಕಳು. ಹಾಗಾಗಿ ನನ್ನ ಒಂದು ಬದಿಯ ಹಲ್ಲಿಗೆ ಮಾತ್ರ ರುಚಿಸಿಗುವಷ್ಟೇ ಸಣ್ಣ ಚೂರು ಸಿಕ್ಕಿತ್ತು. ಆದರೆ ದಿಲ್ಲಿಗೆ ಬಂದ ಮೇಲೆ ಅದನ್ನೂ ಬೇಕಾದಷ್ಟು ತಿಂದಾಯಿತು. ನೋಡಲು ಮಂಗಳೂರಲ್ಲಿ ಸಪ್ಪರ್ ಜೆಲ್ಲಿ, ದಿಲ್ಲಿಯ ಮಾಲ್ ಗಳಲ್ಲಿ ಇಂಡಿಯನ್ ಪಿಯರ್ ಅಂತ ಹೆಸರಿರುವ ಹಣ್ಣಿನಂತೆ ಈ ಪಿಯರ್ ಕೂಡ ಇದೆ. ಆದರೆ ಇದು ತುಂಬ ಮೃದು ಮತ್ತು ಸವಿಯಾದ ಹಣ್ಣು.

ಅಂತೂ ಈ ಹಣ್ಣುಗಳನ್ನೆಲ್ಲ ತಿನ್ನುವಾಗ ನಾನು ದಿಲ್ಲಿಗೆ ಬಂದು ತಪ್ಪು ಮಡಲಿಲ್ಲ ಅಂತನಿಸಿತು. ಊರಲ್ಲಿದ್ದರೆ ಯಾವುದೇ ಹಣ್ಣು ತಿನ್ನುವಾಗಲೂ ಮನೆಯಲ್ಲಿದ್ದವರಿಗೆಲ್ಲ ಕೊಟ್ಟು ನನಗೆ ಸಣ್ಣ ಚೂರೇ ಸಿಗುತ್ತಿತ್ತು. ಆದರೆ ಇಲ್ಲಿ ಮನೆಯಲ್ಲಿ ನಾನೊಬ್ಬಳೇ ಇದ್ದಾಗ ತಂಪಾದ ರುಚಿರುಚಿಯಾದ ಹಣ್ಣು ಇಡಿಇಡಿಯಾಗಿ ಗುಳುಂ....



ಮರೆತು ಹೋಗಿತ್ತು ಈ ಪೀಚ್. ದಿಲ್ಲಿಯಲ್ಲಿ ಸಿಗುವ ಮತ್ತೊಂದು ಹಣ್ಣು. ಈ ಮೊದಲು ಇಂಥ ಹಣ್ಣು ಸವಿಯದ ಕಾರಣ ಹೋಲಿಕೆ ಗೊತ್ತಾಗುತ್ತಿಲ್ಲ.




ಆದರೂ.............


ನಕ್ಷತ್ರನೇರಳೆ, ಪನ್ನೇರಳೆ, ಜಂಬೂನೇರಳೆ, ತಾಳಿಬೊಂಡ, ಕುಂಟಲಹಣ್ಣು, ಮುಳ್ಳಂಕಾಯಿ ಬೇಕೆನಿಸಿದರೆ ಏನುಮಾಡಲಿ?

24 May, 2009

ಕಾಡಿನ ಕತೆಯೊಂದಿಗೆ ಹಾಜರಾದ ಜೋಗಿ...

ಜೋಗಿಯವರ ಅದ್ಭುತ ಕತಾಶೈಲಿಯಿಂದ ಹೊಮ್ಮಿದ ಮತ್ತೊಂದು ಹೊಸ ಕಾದಂಬರಿ ‘ಚಿಟ್ಟೆ ಹೆಜ್ಜೆ ಜಾಡು’. ಕಾಡಿನ ಜಾಡು ಹಿಡಿದು ಹೊರಟ ಕತೆ.
ಮರ ಹೆಮ್ಮರವಾಗಿ ಅದರ ರೆಂಬೆ ಕೊಂಬುಗಳೆಲ್ಲ ಬೆಳೆದು ದೊಡ್ಡದಾದರೂ ಅದು ಗಟ್ಟಿಯಾಗಿ ನಿಂತಿರುವುದು ಮಾತ್ರ ಅದರ ಬೇರನ್ನು ಹಿಡಿದು. ಅಂತೆಯೇ ಜೋಗಿಯವರು ಬೆಂಗಳೂರಿನ ಕಾಂಕ್ರೀಟ್ ಕಾಡಿನ, ಕೆಲಸದ ಒತ್ತಡಗಳ ಮಧ್ಯೆ ಇದ್ದರೂ ಅವರ ಬರವಣಿಗೆಯ ತುಡಿತವಿರುವುದು, (ಮೂಲವಿರುವುದು) ಅವರು ಹುಟ್ಟಿದ ಪರಿಸರದಲ್ಲೇ. ಆದ್ದರಿಂದಲೇ ಕಾಡಿನ ಕತೆಗಳನ್ನುನ್ನು ಅಷ್ಟು ನವಿರಾಗಿ, ಸಮರ್ಥವಾಗಿ ಲೇಖಕನಿಗೆ ಬರೆಯಲು ಸಾಧ್ಯವಾದುದು.
‘ಕಾಡಿನ ಕತೆ’ ‘ನದಿಯ ನೆನಪಿನ ಹಂಗು’ವಿನಂತೆ:
ಜೋಗಿಯವರ ‘ನದಿಯ ನೆನಪಿನ ಹಂಗು’ ಕಾದಂಬರಿ ಆರಂಭವಾಗುವುದೇ ಉಪ್ಪಿನಂಗಡಿಯ ನಿರಂಜನ ಎಂಬವನ ಸಾವಿನ ಅಥವಾ ಕೊಲೆಯ ಗೊಂದಲದಿಂದ. ಮುಂದೆ ಕತೆ ಪೂರ್ತಿ ಆತನ ಸಾವಿನ ಸುತ್ತಲೇ ಸುತ್ತುತ್ತಿರಬಹುದೆಂದು ಓದುಗ ತಿಳಿದಿದ್ದರೆ ಅದು ಅವರ ದಡ್ಡತನವಷ್ಟೇ. ಕೊಲೆಯ/ಸಾವಿನ ವಿಷಯವನ್ನು ಆರಂಭದಲ್ಲಿ ಓದುಗರ ತಲೆಯೊಳಗೇರಿಸಿ, ಮುಂದೆ ಕತೆ ಹಲವು ನೈಜ ಘಟನೆಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ. ಅಂತೆಯೇ ‘ಚಿಟ್ಟೆ ಹೆಜ್ಜೆ ಜಾಡು’ ಕೂಡಾ. ನಾಪತ್ತೆಯಾದ ಮೂವರನ್ನು ಮುಂದಿಟ್ಟು ಕತೆ ಕಾಡಿನೊಳಗಿನ ಸತ್ಯಗಳನ್ನು ಓದುಗರ ಮುಂದೆ ತೆರೆದಿಡುವಲ್ಲಿ ಸಮರ್ಥವಾಗಿದೆ.
ಪಶ್ಚಿಮ ಘಟ್ಟದ ಕಾಡಿನ ನಡುವೆ ನಡೆಯುವ ಕತೆ. ಕಾಡಿನಲ್ಲಿ ಕಳೆದು ಹೋದ ಮೂವರನ್ನು ಹುಡುಕುವ ನೆಪದಲ್ಲಿ ಬಂದ ನಿರೂಪಕನಿಗೆ ಕಾಡಿನ ಒಳಗಿನ ಮರ್ಮ ತಿಳಿಯುತ್ತದೆ.ಆರಂಭದಲ್ಲಿ ಪ್ರೀತಿಯ ವಿಷಯಕ್ಕೆ ಒಬ್ಬನನ್ನು ಕೊಲೆ ಮಾಡಲು ಉಳಿದಿಬ್ಬರ ಸಂಚಿನಿಂದ ಮೂವರು ಕಾಡಿಗೆ ಆಮಮಿಸಿ ನಾಪತ್ತೆಯಾದರು ಎಂಬ ಸೂಚನೆ. ಓದುತ್ತಾ ಓದುತ್ತಾ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಎಂಎ ಮಾಡುತ್ತಿರುವ ಹಾಗೂ ತೀವ್ರವಾದ ಪರಿಸರ ಪ್ರೇಮಿ ತನ್ವಿಯನ್ನು ಹುಡುಕಲು ಕಾಡಿಗೆ ಹೊರಟು ಬಂದವರೆಂಬ ಮಾಹಿತಿ, ಕೊನೆಗೆ ಕಂಬಳಿ ಹುಳದ ಬಾಯಿಗೆ ತುತ್ತಾದರೋ ಎಂಬ ಅನುಮಾನ. ಇದನ್ನು ಓದುವಾಗ ಕೇವಲ ಕಂಬಳಿ ಹುಳ ಮನುಷ್ಯರನ್ನು ಮುಕ್ಕಿ ತಿನ್ನಬಹುದೇ ಎಂಬ ಧಿಗಿಲುಂಟಾಗುತ್ತದೆ.
ಆದರೆ ಇದೆಲ್ಲಕ್ಕಿಂತ ಬೇರೆಯೇ ಆದ ಬಲವಾದ ಕಾರಣ ಇದೆ. ಅದೇ ಬಂಡವಾಳಶಾಹೀ ದೋರಣೆ. ಬಂಡವಳಶಾಹೀ ನೀತಿ ಮಾನವ ಜೀವನದ ಕಣಕಣದಲ್ಲೂ ಗೋಚರಿಸಿತ್ತಿರುವ ಇಂದಿನ ದಿನಗಳಲ್ಲಿ ಯಾರ ಹಂಗೂ ಇಲ್ಲದೆ ಮರ, ಗಿಡ, ಕಾಡು, ಪ್ರಾಣಿ, ಪಕ್ಷಿ, ಚಿಟ್ಟಗಳಿರುವ ಸುಂದರ, ಸ್ವಚ್ಛಂದವಾದ ಪರಿಸರ, ವಾತಾವರಣವನ್ನು ಬಿಟ್ಟೀತೇ?
ಭಾರತದ ನದಿಗಳನ್ನೆಲ್ಲ ಜೋಡಿಸುವ ನ್ಯಾಷನಲ್ ಲಿವರ್ ಲಿಂಕ್ ಪ್ರಾಜೆಕ್ಟ್‌ನ ಅಡಿಯಲ್ಲಿ ಬರುವ ನೇತ್ರಾವತೀ-ಹೇಮಾವತಿ ಯೋಜನೆಯನ್ನು ಕಾರ್ಯಗತಗೊಳಿಸಲು ಬಂದಿರುವ ನೆದರ್ಲ್ಯಾಂಡ್ ಸಂಸ್ಥೆಯವರ ಕೈವಾಡವಿರುವ ಸ್ಪಷ್ಟ ಸೂಚನೆ ದೊರೆಯುತ್ತದೆ. ಈ ಯೋಜನೆಯ ವಿರುದ್ಧ ಹೋರಾಡಲು ಹೋದ ತನ್ವಿ ನೀರಿನ ಸೆಳೆತದ ವಿರುದ್ಧ ದಿಕ್ಕಿಗೆ ಈಜಾಡಲು ಹೋಗಿ ಕೊಚ್ಚಿಹೋದಂತೆ ಮಾಯವಾದಳು ಎಂಬ ಸೂಚನೆ ಕಾದಂಬರಿಕರ ಮುಂದಿಡುತ್ತಾನೆ. ಆಕೆಯನ್ನು ಹುಡುಕಲು ಬಂದ ಮೂವರೂ ನಿಗೂಢವಾಗಿ ನಾಪತ್ತೆಯಾಗುತ್ತಾರೆ. ಕಾಡಿನ ಒಳಗೆ ಹಾಗೂ ಅದರ ಸುತ್ತಲಿನ ಪರಿಸರದ ಆಗುಹೋಗುಗಳನ್ನು ಅಂತಾರಷ್ಟ್ರೀಯ ಸಂಸ್ಥೆಯವರಿಗೆ ತಿಳಿಸಲು ಪಟ್ಟಣದ, ಮನುಷ್ಯರ ಸಹವಾಸವೇ ಬೇಡವೆಂದು ಕಾಡಿನೊಳಗೆ ಮನೆಮಾಡಿ ಕುಳಿತಿರುವಂತೆ ಕಾಣಿಸಿಕೊಳ್ಳವ, ಗುಢಾಚಾರದ ಕೆಲಸ ಮಡುವ ಭೋಜರಾಜ. ಆದರೆ ಈ ಎಲ್ಲ ವಿವರಗಳೇ ಅಂತಿಮ ಸತ್ಯವೆಂದು ಎಲ್ಲೂ ಕಾದಂಬರಿಕಾರ ಹೇಳಿಕೊಳ್ಳವುದಿಲ್ಲ. ಓದುಗರ ಗಮನಕ್ಕಷ್ಟೇ ತರುವ ಕೆಲಸವಿದೆ.
ಫಾರೆಸ್ಟ್ ಆಫೀಸರ್ ವಾಗ್ಲೆ, ಅಲ್ಲೇ ನೌಕರಿಯಲ್ಲಿರುವ ಮುಗ್ಧನಂತೆ ನಟಿಸುವ ಸಾಂತು, ಕೃಷ್ಣಪ್ಪ, ಫಾರಸ್ಟ್ ಡಿಪಾರ್ಟ್‌ಮೆಂಟಿನಲ್ಲಿ ನೌಕರಿಗಾಗಿ ಹಪಹಪಿಸುವ ಕೆಂಚ ಇವರೆಲ್ಲರ ಬದುಕೂ ಸುಂದರ ಪ್ರಕೃತಿತಂತೆ ಗೋಚರಿಸುವ ಕಾಡಿನೊಳಗೆ ನಡೆಯುವ ಕೆಟ್ಟ ರಾಜಕೀಯದಲ್ಲಿ ಲೀನವಾದುದು ಎಂಬ ಅಂತಿಮ ಸತ್ಯ ನಿರೂಪಕನಿಗೂ ಓದುಗರಿಗೂ ಅರ್ಥವಾಗುತ್ತದೆ.
ಕಾದಂಬರಿಯ ಕೊನೆಯ ಹಂತದಲ್ಲಿ ಬರುವ ಮುಧೋಳ ನಾಯಿ ಮತ್ತು ನಿರೂಪಕನ ನಡುವೆ ನಡೆಯುವ ಸಂಘರ್ಷವಂತೂ ಅದ್ಭುತ ರೋಚಕತೆಗೆ ಹಿಡಿದ ಕನ್ನಡಿ.
ಕೊನೆಗೂ ಕಾದಂಬರಿ ಓದುಗರನ ಮುಂದೆ ಹಲವು ನಿಗೂಢಗಳಿಗೆ ಅರ್ಥ ಕಲ್ಪಿಸದೆ ಮುಗಿದುಬಿಡುತ್ತದೆ.
ಕಾದಂಬರಿ ಓದುತ್ತಿದ್ದರೆ ಬೇಡವೆಂದರೂ ತೇಜಸ್ವಿಯವರ ಬರಹಗಳು ನೆನಪಿಗೆ ಬರುತ್ತವೆ. ಜೋಗಿಯವರದೇ ಆದ ‘ರಾಯಭಾಗದ ರಹಸ್ಯ ರಾತ್ರಿ’ ಕಥಾ ಸಂಕಲನದಲ್ಲಿರುವ ರೋಚಕ ಕತೆಗಳು ಮನಸೊಳಗೆ ಮುತ್ತಿಡುತ್ತವೆ.
"ತುಂಬಿಕೊಂಡು ನಕ್ಷತ್ರಗಳನ್ನು ಲೆಕ್ಕ ಹಕುತ್ತಾ ಮಲಗಿದರೆ ಎಚ್ಚರವಾಗುವ ಹೊತ್ತಿಗೆ ಚಂದ್ರ ಸೂರ್ಯನಾಗಿರುತ್ತಿದ್ದ." ಇಂತಹ ಸುಂದರ ಸಾಲುಗಳು ಅಲ್ಲಲ್ಲಿ ಓದುಗರಿಗೆ ಮುದನೀಡುತ್ತದೆ.
ನಿರೂಪಕ ಆತನ ಗೆಳೆಯ ಶಿವು, ಫಾರೆಸ್ಟ ಡಿಪಾರ್ಟ್‌ಮೆಂಟಿನಲ್ಲಿ ಸಣ್ಣ ಹುದ್ದೆಯಲ್ಲಿರುವ ಸಾಂತು ಆತನ ಗೆಳೆಯ ಕೆಂಚ ಇವರೆಲ್ಲ ಕಳೆದು ಹೋದ ಮೂವರನ್ನು ಹುಡುಕುತ್ತಾ ಕಾಡಲ್ಲಿ ಸಾಗುತ್ತಿದ್ದಂತೆ ಅವರ ಹಿಂದಿನಿಂದ ಕಾಡಿನಲ್ಲಿ ನಾವೂ ಸಾಗುತ್ತಿದ್ದೇವೆಯೇನೋ ಎಂಬಷ್ಟರ ಮಟ್ಟಿಗೆ ಕಾಡಿನ ವರ್ಣನೆ ಆಪ್ತವಾಗಿದೆ.

ಅಂತಿಮ ಸಂದೇಶ: ಕೊನೆಗೂ ಕಾದಂಬರಿ ಓದಿದ ಮೇಲೆ ನಮಗೆ ನೀಡುವ ಸಂದೇಶವೇನು ಎಂಬುದು ಕಾದಂಬರಿಯ ಸಾಲುಗಳಲ್ಲೇ ಓದಿ. "ಜಾಗತೀಕರಣ ನಮ್ಮ ಕಲೆಗಳನ್ನೂ ಸಾಹಿತ್ಯವನ್ನೂ ಭಾಷೆಯನ್ನೂ ಕೊಲ್ಲವ ಹಾಗೆ. ನಮ್ಮ ಚಟುವಟಿಕೆಗಳನ್ನೂ ನಿಯಂತ್ರಿಸತೊಡಗುತ್ತದೆ. ನಮ್ಮ ಸಹಜ ಉಲ್ಲಾಸ, ಪ್ರತಿಭಟನೆ, ಸಾತ್ವಿಕ ಸಿಟ್ಟು, ಕಾಡಿನ ಪ್ರೀತಿ ಕೂಡ ಯಾರದೋ ಪಾಲಿಗೆ ಪ್ರಾಣಕಂಟಕವಾಗಿ ಕಾಣಿಸುತ್ತದೆ."

"ಇನ್ನು ಬರೆಯುವುದಿಲ್ಲ ಎಂಬ ಆಶ್ವಾಸನೆ ಪದೇ ಪದೇ ಸುಳ್ಳಾಗಿದೆ" ಎಂದು ಜೋಗಿಯವರು ತಮ್ಮ ‘ರಾಯಭಾಗದ ರಹಸ್ಯ ರಾತ್ರಿ' ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಹಾಗೇ "ಕಾಡಿನ ಕತೆಗಳ ಸರಣಿಯಲ್ಲಿ ಇದು ಕೊನೆಯದು" ಎಂಬ ಅವರ ಈ ಹೇಳಿಕೆಯೂ ಆಶ್ವಾಸನೆಗಷ್ಟೇ ಸೀಮಿತವಾಗಿರಲಿ ಎಂದು ನಾವು ಬಯಸೋಣವೇ?

18 May, 2009

ಕತೆ ಫೋಟೋಗ್ರಾಫ್ ಇದ್ದಹಾಗೆ, ಕಾದಂಬರಿ ವೀಡಿಯೋ ಇದ್ದಹಾಗೆ_ ಎಂದ ಬರಹಗಾರ

1. ನಿಮ್ಮ ಪ್ರಕಾರ ಕತೆ ಅಂದರೇನು? ಕತೆ ಹುಟ್ಟುವ ಕ್ಷಣ ಯಾವುದು?
_ ಕತೆ ಅಂದರೆ ಬದುಕು, ಪ್ರೀತಿಸುವ ಕ್ರಮ, ಬದುಕುವ ರೀತಿ, ಅರ್ಥವಾಗದೇ ಇರುವುದನ್ನು ಅರ್ಥಮಾಡಿಕೊಳ್ಳವ ವಿಧಾನ. ಬದುಕು ಸಾಮಾನ್ಯವಾಗಿ ವರದಿಗಳಲ್ಲಿ ತೆರೆದುಕೊಳ್ಳತ್ತದೆ. ಅಲ್ಲಿ ಹೀಗಾಯಿತು, ಇಂಥ ಸಂಗತಿ ನಡೆಯಿತು ಎಂದು ನಾವು ಪರಿಚಿತರ ಬಳಿ ಹೇಳಿಕೊಳ್ಳತ್ತೇವೆ. ನಾನು ಚೆನ್ನಾಗಿದ್ದೇನೆ, ಮದುವೆಯಾಯ್ತು. ಮೂರು ಮಕ್ಕಳು, ಮೊದಲನೆ ಮಗಳಿಗೆ ನಾಡಿದ್ದು ಮದುವೆ ಎಂದು ನಮ್ಮ ಸಂಪರ್ಕದಲ್ಲಿರುವ ಮಂದಿಗೆ ಹೇಳುತ್ತೇವೆ. ಅದು ಕೂಡ ವರದಿಯೇ. ಆದರೆ ಅದರ ಹಿಂದಿನ ತುಮುಲ, ತಲ್ಲಣಗಳನ್ನು ಸಂತೋಷ ಮತ್ತು ಉಲ್ಲಾಸಗಳನ್ನು ನಾವು ತೀರಾ ಆತ್ಮೀಯರ ಜೊತೆಗಷ್ಟೆ ಹಂಚಿಕೊಳ್ಳತ್ತೇವೆ. ಆಪ್ತರಿಗಷ್ಟೇ ಅದು ದಾಟಿಕೊಳ್ಳತ್ತದೆ.
ಕತೆಯೆಂದರೆ ಅಂತದ್ದೊಂದು ಸಂತೋಷವನ್ನು, ನೋವನ್ನು ಒಳಗುದಿಯನ್ನು ಎಲ್ಲರಿಗೂ ದಾಟಿಸುವ ರೀತಿ. ಅದು ಕಲೆಯಾದಾಗ ಅಲ್ಲಿ ನಾವು ಮಾಯವಾಗಿ ಓದುಗ ತನ್ನನ್ನು ತಾನು ಕಂಡುಕೊಳ್ಳತ್ತಾನೆ. ನನಗೂ ನನ್ನ ಹೆಂಡತಿಗೂ ಜಗಳವಾಯಿತು ಅಂದರೆ ಅದು ಮಾಮೂಲು ಸಂಗತಿ. ರುದ್ರಪಟ್ಟಣದ ಶರಶ್ಚಂದ್ರನೂ ಅವನ ಹೆಂಡತಿ ಮನೋರಮೆಯೂ ಅವತ್ತು ಬೆಳ್ಳಂಬೆಳಗ್ಗೆ ಶರಂಪರ ಬೈದಾಡಿಕೊಂಡರು ಎಂದರೆ ಅದು ಕತೆ.
ಕತೆ ಹುಟ್ಟುವ ಕ್ಷಣದ ಬಗ್ಗೆ ನನಗೆ ಗೊತ್ತಿಲ್ಲ. ಸುಮ್ಮನಿದ್ದಾಗಲೊ ತುಂಬ ಬಿಜಿಯಾಗಿದ್ದಾಗಲೊ ಮನಸ್ಸಿಗೆ ಸಾಲು ಹೊಳೆಯುತ್ತದೆ. ಎಂದೋ ಕಂಡದ್ದು, ಅರ್ಥಮಾಡಿಕೊಳ್ಳಲಾಗದೇ ಇದ್ದದ್ದು ಮನಸ್ಸಿನ ಮುಂದೆ ಪ್ರತ್ಯಕ್ಷವಾಗುತ್ತದೆ. ಅದು ಹಾಗಾಗದೇ ಇರಬಹುದು. ಸುಮ್ಮನೆ ಕೂತು ಏಕಾಂತವನ್ನು ಆನಂದಿಸುವುದಕ್ಕೆಂದೂ ನಾನು ಬರೆದದ್ದಿದೆ. ಅದಕ್ಕೊಂದು ಕ್ಷಣ ಬೇಕೆಂದು ನನಗನಿಸಿಲ್ಲ.
2. ಸಣ್ಣಕತೆ ಮತ್ತು ಕದಂಬರಿ ಇವುಗಳ ನಡುವಿನ ವ್ಯತ್ಯಾಸವೆನು? ನಿಮ್ಮ ಬರವಣಿಗೆಯ ಹಿನ್ನೆಲೆಯಿಂದ ಹೇಳಿ.
_ ನನ್ನ ಪ್ರಕಾರ ಸಣ್ಣಕತೆ ಮತ್ತು ಕಾದಂಬರಿಗೆ ಅಂತ ವ್ಯತ್ಯಾಸವೇನೂ ಇಲ್ಲ. ಒಂದು ಕ್ಷಣಭಂಗುರವನ್ನು ಹಿಡಿದಿಡುತ್ತದೆ. ಇನ್ನೊಂದು ಅನಂತದತ್ತ ಕೈಚಾಚುತ್ತದೆ. ಕತೆ ಫೋಟೋಗ್ರಾಫ್ ಇದ್ದ ಹಾಗೆ, ಕಾದಂಬರಿ ವೀಡಿಯೋ ಇದ್ದ ಹಾಗೆ. ನನ್ನ ಕತೆಗಳಲ್ಲಿ ಕಾದಂಬರಿಯ ಛಾಯೆ, ಕಾದಂಬರಿಯಲ್ಲಿ ಕತೆಯ ಕ್ಷಣಿಕತೆ ಕಾಣಿಸೀತು. ನಾನು ಕತೆಯೆಂದು ಆರಂಭಿಸಿದ್ದು ಕಾದಂಬರಿಯಾದದ್ದೂ ಇದೆ, ಕಾದಂಬರಿ ಬರೆಯಬೇಕೆಂದುಕೊಂಡದ್ದು ಕತೆಯಾಗಿ ಮುಗಿದದ್ದೂ ಇದೆ.
3. ನೀವು ಮೆಚ್ಚುವ ಕತೆಗಾರ ಯಾರು? ಯಾಕೆ?
_ ನಾನು ತುಂಬ ಮೆಚ್ಚುವ ಕತೆಗಾರ ಲಂಕೇಶ್. ಅವರು ಸುಮ್ಮನೆ ಕತೆಗಳನ್ನು ಹೇಳತ್ತಾ ಹೋದರು. ಅವರ ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ, ಗಿಳಿಯು ಪಂಜರದೊಳಿಲ್ಲ, ನಾನಲ್ಲ, ಒಂದು ಬಾಗಿಲು, ಕಲ್ಲು ಕರಗುವ ಸಮಯ ಮುಂತಾದ ಕತೆಗಳಲ್ಲಿ ಏನನ್ನೂ ಹೇಳದೆ ಎಲ್ಲವನ್ನೂ ಒಳಗೊಳ್ಳತ್ತಾರೆ. ಅವರಷ್ಟೇ ನಾನು ಮೆಚ್ಚುವ ಮತ್ತೊಬ್ಬ ಕತೆಗಾರ ತೇಜಸ್ವಿ, ಅವರು ಕೂಡ ಭಾರವಿಲ್ಲದೆ ಕತೆ ಹೇಳುತ್ತಾರೆ, ಲವಲವಿಕೆಯಿಂದ ಹೇಳತ್ತಾರೆ. ಇಂಥದ್ದೇ ಹೇಳಬೇಕೆಂಬ ಪೂರ್ವಾಗ್ರಹವಿಲ್ಲದೆ ಹೇಳತ್ತಾರೆ. ಹಾಗೆ ಹೇಳವುದೇ ನನಗಿಷ್ಟ.
4. ನೀವು ಮೆಚ್ಚುವ ಕಾದಂಬರಿಕಾರ ಯಾರು?
_ ಕಾದಂಬರಿಕಾರರ ಪೈಕಿ ನನಗೆ ಕುವೆಂಪು ಅಚ್ಚುಮೆಚ್ಚು. ಅವರ ಕಾನೂರ ಹೆಗ್ಗಡತಿ ನನಗೆ ಆಲ್ ಟೈಮ್ ಫೇವರೇಟ್. ಕಾನೂರ ಹೆಗ್ಗಡತಿ ನನ್ನನ್ನು ಮತ್ತೊಂದು ಬದುಕಿಗೆ ಪರಿಚಯಿಸಿದ ಕೃತಿ. ಅದು ಅಚ್ಚಗನ್ನಡದ ಕಾದಂಬರಿ ಎಂಬ ಕಾರಣಕ್ಕೂ ನನಗಿಷ್ಟ. ಹಾಗೇ ಬೌದ್ಧಿಕ ಕಾರಣಕ್ಕೆ ನನಗೆ ಅನಂತಮೂರ್ತಿ ಇಷ್ಟ. ಅವರ ಅವಸ್ಥೆ ಕಾದಂಬರಿಯನ್ನು ನಾನು ಮತ್ತೆ ಮತ್ತೆ ಓದಿ ಸಂತೋಷಪಟ್ಟಿದ್ದೇನೆ. ಈಗ ಥಟ್ಟನೆ ಹೇಳಿದಾಗ ಹೊಳೆಯುವ ಮತ್ತೊಂದು ಕಾದಂಬರಿ ಕರ್ವಾಲೋ. ಅದು ಅಪೂರ್ವ ಪಾತ್ರ ಸೃಷ್ಟಿಗೆ ಸಾಕ್ಷಿ.

5. ಸಾಹಿತಿಗೆ ಸಾಮಾಜಿಕ ಜವಾಬ್ದಾರಿ ಇದೆಯೇ?
_ ಸಾಮಾಜಿಕ ಜವಾಬ್ದಾರಿ ಯಾರಿಗಿಲ್ಲ. ಆದರೆ ಆ ಹೆಸರೇಕೋ ನನಗೆ ಅಲರ್ಜಿ. ಸಮಾಜದಲ್ಲಿ ಬದುಕುವ ಎಲ್ಲರೂ ಎಲ್ಲರ ಸಂತೋಷಕ್ಕೂ ಜವಾಬ್ದಾರರೇ. ಸಾಹಿತಿಗಳು ತಾವೇನೋ ಮಹಾ ವ್ಯಕ್ತಿಗಳು ಎಂದು ಭಾವಿಸಬೇಕಿಲ್ಲ. ಉಳಿದವರಷ್ಟೇ ಅವರೂ ಬಾಧ್ಯರು. ಅವರಿಗೆ ಬರೆಯುವ ಶಕ್ತಿ ಇದೆ, ಬರೆಯುತ್ತಾರೆ. ಹೀಗಾಗಿ ಅವರ ಅಭಿಪ್ರಾಯಗಳು ಎಲ್ಲರನ್ನೂ ತಲಪುತ್ತವೆ, ಅಷ್ಟೇ ವ್ಯತ್ಯಾಸ.

6. ವರ್ತಮಾನದ ಸಾಹಿತ್ಯದ ಗತಿ ಹೇಗಿದೆ? ಅದರ ಗುಣಮಟ್ಟ ಯಾವ ರೀತಿಯಲ್ಲಿದೆ? ಓದುಗರಿಗೆ ಹೇಗೆ ತಲುಪುತ್ತಿದೆ?
_ ನನ್ನ ಪ್ರಕಾರ ರಂಜನೆಗಾಗಿ ಸಾಹಿತ್ಯ, ನೆಮ್ಮದಿಗಾಗಿ ಸಾಹಿತ್ಯ, ಬದಲಾವಣೆಗಾಗಿ ಸಾಹಿತ್ಯ ಎಂಬ ಮೂರು ವರ್ಗಗಳಿವೆ. ಈ ಮೂರೂ ಮುಖ್ಯವೇ, ನಾನು ಮೂರನ್ನೂ ಮೆಚ್ಚುತ್ತೇನೆ. ಆದರೆ ನಾನೀಗ ಓದುವುದು ನೆಮ್ಮದಿಗಾಗಿ. ಮನಸ್ಸನ್ನು ಹದಗೊಳಿಸುವುದಕ್ಕಾಗಿ. ಚಕಿತಗೊಳಿಸುವ, ಬೆರಗಾಗಿಸುವ ಕೌತುಕವನ್ನು ಉಳಿಸುವ ಸಾಹಿತ್ಯ ನಂಗಿಷ್ಟ. ಅದೇ ಕಾರಣಕ್ಕೆ ತೇಜಸ್ವಿ ಮೆಚ್ಚುಗೆಯಾಗುತ್ತಾರೆ.
ರಂಜನೆಗಾಗಿ ಓದಿದವರ ಪೈಕಿ ಟಿ.ಕೆ. ರಾಮರಾವ್ ಅಚ್ಚುಮೆಚ್ಚು. ಪರಿವರ್ತನೆಯ ಹಾದಿಯನ್ನು ಕ್ರಮಿಸಿದವರ ಪೈಕಿ ನಮ್ಮ ವಚನಕಾರರು ಮತ್ತು ಈ ಕಾಲದ ದೇವನೂರು ಮಹಾದೇವ, ತುಂಬಾಡಿ ರಾಮಯ್ಯ, ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರಪ್ಪ ಮುಂತಾದವರಿ ಇಷ್ಟ.
ಈಗಲೂ ನಾನು ನೆಮ್ಮದಿಗಾಗಿ ಓದುವುದು ವಿವೇಕ ಶಾನುಭಾಗ, ಸತ್ಯನಾರಾಯಣ, ಜಯಂತ ಕಾಯ್ಕಿಣಿ ಮುಂತಾದವರನ್ನು.

7. ಬಂಡವಾಳಶಾಹಿಯ ಇವತ್ತಿನ ಸಮಾಜದಲ್ಲಿ ಸಾಹಿತಿಯ ಪಾತ್ರವೇನು?
_ ಆರ್ಥಿಕ ಬದಲಾವಣೆಗೂ ಸಾಹಿತ್ಯಕ್ಕೂ ಸಂಬಂಧವಿಲ್ಲ. ಅಂಥ ಚಳವಳಿಗಳನ್ನೆಲ್ಲ ಸಾಹಿತ್ಯದಲ್ಲಿ ತರಲು ಹೊರಟರೆ ಸಾಹಿತ್ಯ ಪ್ರಣಾಳಿಕೆಯಾಗುತ್ತದೆ. ಸಾಹಿತ್ಯ ಯಾವುದನ್ನು ಅಂಟಿಸಿಕೊಳ್ಳದೆ ಎಲ್ಲವನ್ನು ಒಳಗೊಂಡಿರಬೇಕು. ವಿವೇಕ ಶಾನುಭಾಗರ ‘ಹುಲಿ ಸವಾರಿ’ ಕತೆಯಂತಿರಬೇಕು. ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಯಲ್ಲಿ ಮಂದಣ್ಣ ಮತ್ತು ಕರ್ವಾಲೋ ಎಂಬ ಎರಡು ಪಾತ್ರಗಳಿವೆ. ಈ ಪಾತ್ರಗಳನ್ನು ಎದುರು ಬದುರು ನಿಲ್ಲಿಸಿದಾಗ ನಿಚ್ಚಳವಾಗುವ ಜಗತ್ತು ಸಾಹಿತ್ಯದಲ್ಲಿ ಮಾತ್ರ ಸಾಧ್ಯ ಎಂಬ ನಂಬಿಕೆ.

8. ಮಾಧ್ಯಮಗಳ ಮೇಲೆ ನಿಯಂತ್ರಣ ಬೇಕಾ?
_ ಮಾಧ್ಯಮದ ಮೇಲೆ ನಿಯಂತ್ರಣ ಇರಬೇಕು ಎಂದು ಎಷ್ಟೋ ಬಾರಿ ಅನಿಸುತ್ತದೆ. ವ್ಯಕ್ತಿಗಳ ಖಾಸಗಿ ಬದುಕನ್ನು ಬಹಿರಂಗವಾಗಿಸುವ ರೀತಿ ಆಕ್ಷೇಪಣೀಯ. ಒಬ್ಬ ವ್ಯಕ್ತಿಯ ಅವಮಾನದ ಕ್ಷಣವನ್ನು, ಸಂಕಟವನ್ನು ಮಾಧ್ಯಮ ಪ್ರತಿಬಿಂಬಿಸಬಾರದು. ಅದು ಕಲೆ ಮತ್ತು ಸಾಹಿತ್ಯದ ಕೆಲಸ. ಹೆಂಡತಿ ಸುಟ್ಟು ಸತ್ತಾಗ, ಮಗ ಯುದ್ಧದಲ್ಲಿ ಸತ್ತಾಗ ನಿಮಗೇನನ್ನಿಸುತ್ತದೆ ಎಂದು ಕೇಳುವುದು ಅಮಾನವೀಯ. ಕಲೆಗಿರುವ ಮಾನವೀಯ ಗುಣವನ್ನು ಮಾಧ್ಯಮ ಕಳಕೊಂಡಿದೆ.

9. ದೃಶ್ಯ ಮಾಧ್ಯಮದಲ್ಲಿ ತಾವು ಮಾಡಿದ ಕೆಲಸಗಳ ವಿವರ?
_ ನಾನು ಒಂದಷ್ಟು ಸೀರಿಯಲ್ಲುಗಳಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದೇನೆ. ಮೂರು ಸಿನೆಮಾಗಳಿಗೆ ಕೆಲಸ ಮಾಡಿದ್ದೇನೆ. ನಾನು ಚಿತ್ರಕತೆ, ಸಂಭಾಷಣೆಬರೆದ ಮೊದಲ ಟಿವಿ ಧಾರಾವಾಹಿ ಶಿಕಾರಿ. ಕತೆ, ಚಿತ್ರಕತೆ, ಸಂಭಾಷಣೆ ಬರೆದ ಧಾರಾವಾಹಿ ಸುಮಾರಿ ಇಪ್ಪತ್ತು. ಅವುಗಳಲ್ಲಿ ಜನಪ್ರಿಯವಾದವು ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇ ಬರುತಾವ ಕಾಲ, ಮನೆಯೊಂದು ಮೂರು ಬಾಗಿಲು, ಶರಪಂಜರ, ಭೆಳ್ಳಿ ತೆರೆ, ಕಲ್ಯಾಣಿ, ಯಜ್ಞಕುಂಡ...
ಸಿನೆಮಾಗಳು ಅನಂತಮೂರ್ತಿ ಕತೆ ಆಧರಿಸಿದ ಮೌನಿ, ಕಾಡ ಬೆಳದಿಂಗಳು, ಕೇರಾಫ್ ಫುಟ್‌ಪಾತ್
10. ದೃಶ್ಯ ಮಾಧ್ಯಮದ ಬಗೆಗೆ ಸೆಳೆತ ಬೆಳೆಯಲಿ ಕಾರಣ?
_ ಟಿವಿ ಧೃಶ್ಯ ಮಾಧ್ಯಮಕ್ಕೆ ಸೆಳೆತ ಮುಖ್ಯವಾಗಿ ಹಣ ಮತ್ತು ಗೆಳೆಯರ ಓತ್ತಾಯ. ಇವತ್ತಿಗು ಅದನ್ನು ನಾನು ಸಾಹಿತ್ಯಕ ಕ್ರಿಯೆ ಎಂದು ಭಾವಿಸಿಲ್ಲ. ಅದೊಂದು ಗುಮಾಸ್ತಗಿರಿ ಅಷ್ಟೇ. ಸಿನೆಮಾ ಸಾಹಿತ್ಯದ ಹಾಗೇ ಕಲಾ ಮಾಧ್ಯಮ. ಅದು ನನಗೆ ಖುಶಿಕೊಟ್ಟಿದೆ.

11. ದೃಶ್ಯ ಮಾಧ್ಯಮದ ಸಾಧ್ಯತೆ ಮತ್ತು ಸವಾಲುಗಳೇನು?
_ ದೃಶ್ಯ ಮಾಧ್ಯಮವೇ ಇವತ್ತಿನ ಪ್ರಭಾವೀ ಮಾಧ್ಯಮ. ಅದರ ಮೂಲಕ ಹೇಳುವಷ್ಟು ಸಮರ್ಥವಾಗಿ ಬೇರೆ ಯಾವ ಮಧ್ಯಮಗಳಲ್ಲಿ ಹೇಳುವುದು ಕಷ್ಟ. ಹೇಳಲು ಸಾಧ್ಯವಾದರೂ ಬೇರೆ ಮಾಧ್ಯಮ ಕೆಲವೇ ಮಂದಿಗೆ ತಲುಪುತ್ತದೆ. ಒಂದು ಕತೆಯನ್ನೋ ಕಾದಂಬರಿಯನ್ನೋ ಹತ್ತು ಸಾವಿರ ಮಂದಿ ಓದಬಹುದು. ಸಿನೆಮಾ ಆದಾಗ ಲಕ್ಷಾಂತರ ಮಂದಿ ನೋಡುತ್ತಾರೆ.
ದೃಶ್ಯ ಮಾಧ್ಯಮದ ಮುಂದಿರುವ ಸವಾಲೆಂದರೆ ಆರ್ಥಿಕತೆ. ಅದು ತನ್ನನ್ನು ತಾನು ಸಮಭಾಳಿಸಿಕೊಳ್ಳುವಷ್ಟು ಸಮರ್ಥವಾಗಿರಬೇಕು.

12. ಬರವಣಿಗೆಯ ಬೆಳವಣಿಗೆಯಲ್ಲಿ ಅಂತರ್ಜಾಲದ ಪಾತ್ರವೇನು?
_ ಅಂತರ್ಜಾಲ ಬರಹಗಾರದಲ್ಲದವರನ್ನೂ ಬರಹಗಾರರನ್ನಾಗಿಸಿತು. ಆದರೆ ಬರೆದದ್ದು ಬೇಗ ಎಲ್ಲರನ್ನೂ ತಲಪುವಂತೆ ಮಾಡಿತು. ಆದರೆ ಬರಹದ ಆಯುಸ್ಸನ್ನು ಕಡಿಮೆ ಮಾಡಿತು. ಓದು ಮರೆಯುವಂತೆ ಮಾಡಿದ್ದರಲ್ಲಿ ಅಂತರ್ಜಾಲದ ಪಾತ್ರ ದೊಡ್ಡದು. ಅದು ಅಕ್ಷರ ಲೋಕವನ್ನು ಬೆಳೆಸಿದಷ್ಟು ಅಳಿಸಲೂ ಕಾರಣವಾಗಿರಬಹುದು.

13. ನಿಮ್ಮ ಬರವಣಿಗೆಯ ತಾತ್ವಿಕತೆಯೇನು?
_ ತಾತ್ವಿಕತೆಯ ಬಗ್ಗೆ ನನಗೆ ನಂಬಿಕೆ ಇಲ್ಲ.

14. ನೀವು ಕಂಡುಕೊಂಡಂತೆ ನಿಮ್ಮ ಅನನ್ಯತೆಯೇನು?
_ ಗೊತ್ತಿಲ್ಲ. ಅದನ್ನು ನೀವೇ ಹೇಳಬೇಕು. ನಾನು ಖುಶಿಯಲ್ಲಿದ್ದಾಗ ಬರೆಯುತ್ತೇನೆ. ಅದು ನನ್ನ ನೋವಿನ, ಧ್ಯಾನಸ್ಥ ಸ್ಥಿತಿಯ ಪ್ರತಿಬಿಂಬವಲ್ಲ. ಅಂಥದ್ದರಲ್ಲಿ ನನಗೆ ನಂಬಕೆ ಇಲ್ಲ.

*********************************

ಸಂದರ್ಶನ ಒಂದೂ ಅರ್ಥವಾಗುತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಖಂಡಿತಾ ಹೇಳುತ್ತೇನೆ. ಇನ್ನು ತಡ ಮಾಡಲಾರೆ. ಕನ್ನಡದಲ್ಲಿ ೪ ಕಾದಂಬರಿ, ೪ ಕಥಾ ಸಂಕಲನ ಹಾಗೂ ಅಂಕಣ ಬರಹದ ಪುಸ್ತಕಗಳನ್ನು ಬರೆದವರು. ಅದಕ್ಕಿಂತಲೂ ಹೆಚ್ಚಾಗಿ ತುಂಬ ಆಪ್ತವಾಗಿ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವ, ಬ್ಲಾಗ್ ಲೋಕದಲ್ಲಿ ನಿಮಗೆಲ್ಲ ತುಂಬ ಸುಪರಿಚಿತರಾದ ಜೋಗಿಯವರು.
ಇದಕ್ಕೂ ಮೊದಲ ಬರಹದಲ್ಲಿ ನಾನು ಹೇಳಿದ್ದೆ. ಎಂಫಿಲ್‌ಗಾಗಿ ನಾನು ಜೋಗಿಯವರ ಕತೆ, ಕಾದಂಬರಿಗಳ ಕುರಿತ ಹಾಗೆ ಅಧ್ಯಯನ ಮಾಡಿದ್ದೆ ಎಂದು. ಹಾಗೆ ಕೆಲವು ಪ್ರಶ್ನೆಗಳನ್ನೂ ಜೋಗಿಯವರಲ್ಲಿ ಕೇಳಿದ್ದೆ. ಅವರು ನೀಡಿದ ಉತ್ತರ ನನಗಂತೂ ಇಷ್ಟವಾಗಿತ್ತು. ನಿಮಗೂ ಖುಶಿ ನೀಡಬಹುದೆಂಬ ನಂಬಿಕೆಯಿಂದ ಬ್ಲಾಗಿನಲ್ಲಿ ಹಾಕಿದೆ.
ಈ ವಿಷಯವನ್ನು ಆರಂಭದಲ್ಲೇ ಹೇಳಿದ್ದರೆ ನಾನು ಕೇಳಿದ ಪ್ರಶ್ನೆ ಅವರು ನೀಡಿದ ಉತ್ತರ ಎರಡನ್ನೂ ನೀವು ಓದದೇ ಇರಬಹುದೆಂಬ ಭಯದಿಂದ ಹಾಗೂ ತುಸು ಭಿನ್ನವಾಗಿರಲೆಂದು ಕೊನೆಗೆ ಹೇಳಿದೆ.
ಅಂದ ಹಾಗೆ ನಾನು ನನ್ನ ಪ್ರಬಂಧವನ್ನು ಲೇಟ್ ಆಗಿ ಸಬ್ಮಿಟ್ ಮಾಡಿದ್ದೆ. ಆದ ಕಾರಣ ಜೋಗಿಯವರ ಯಾಮಿನಿ, ಹಿಟ್ ವಿಕೆಟ್ ಹಾಗೂ ರಾಯಭಾಗದ ರಹಸ್ಯ ರಾತ್ರಿ ಕೃತಿಗಳನ್ನು ನನ್ನ ಅಧ್ಯಯನಕ್ಕೆ ಒಳಪಡಿಸಲಾಯಿತು. ಇನ್ನೂ ತಡ ಮಾಡಿದ್ದರೆ ಈಗ ಅವರು ಬರೆಯುತ್ತಿರುವ ಹೊಸ ಕಾದಂಬರಿ "ಚಿಟ್ಟೆ ಹೆಜ್ಜೆ ಜಾಡು"ವನ್ನೂ ಸೇರಿಸಬಹುದಿತ್ತು!!!
ಫೋಟೋ : ಅವಧಿ

09 May, 2009

ತೆರೆದ ಪುಟ

ಊರಿಗೆ ಹೋಗಿ ಬಂದೆ. ಸುಮಾರು ಮೂರು ತಿಂಗಳು ಅದು ಹೇಗೆ ಕಳೆದು ಹೋಯಿತೋ... ಬೇಸರ...
ಊರಿಂದ ಬಂದು ವಾರವಾಗುತ್ತಾ ಬಂದರೂ ಬ್ಲಾಗಿಗೆ ಬರೆಯಲು ವಿಷಯ ತುಂಬಾ ಇದ್ದರೂ ವಾಕ್ಯಗಳೇ ಮೂಡುತ್ತಿಲ್ಲ ಮನಸ್ಸಲ್ಲಿ.
ಮಂಗಳೂರಲ್ಲಿದ್ದಾಗ ಸಮಯ ಹೇಗೆ ಕಳೆಯುವುದೆಂದು ಗೊತ್ತಾಗದ ಸಂದರ್ಭದಲ್ಲಿ ಹಂಪಿ ವಿಶ್ವವಿದ್ಯಾಲದವರು ಎಂಫಿಲ್ ಪದವಿಗೆ ಅರ್ಜಿ ಕರೆದಿದ್ದರು. ಪೇಪರಿನಲ್ಲಿ ನನ್ನ ಕಣ್ಣಿಗೆ ಕಂಡ ಆ ಜಾಹಿರಾತಿಗೆ ಪತಿಯ ಅನುಮತಿ ಪಡೆದು ಕೂಡಲೇ ಅರ್ಜಿ ಹಾಕಿದ್ದೆ. ೩ ತಿಂಗಳು ತರಗತಿಗೂ ಹೋದೆ. ಮತ್ತೆ ಎಂ.ಎ ತರಗತಿಯಲ್ಲಿ ಕುಳಿತ ಅನುಭವ. ಮಜವಾಗಿತ್ತು.
ಹಂಪಿಯವರು ಎಂಫಿಲ್‌ಗಾಗಿ ಸಿದ್ಧ ಮಾಡಿದ ವಿಷಯಗಳು ಮಾತ್ರ ಪರೀಕ್ಷೆ ಪಾಸಾದರೂ ಅರ್ಥವಾಗಿರಲಿಲ್ಲ, ಈಗಲೂ...
ಪರೀಕ್ಷೆ ಬರೆದು ಪಾಸಾಗುವುದೇ ಸುಲಭ ಅಂತ ಅನ್ನಿಸಲು ಶುರುವಾದದ್ದು ಮಾತ್ರ ೧೦೦ ಪುಟದ ಥೀಸೀಸ್ ಬರೆಯಬೇಕೆಂದು ಹೇಳಿದಾಗ!
ಯಾವುದರ ಬಗ್ಗೆ, ಏನು ಬರೆಯಬೇಕೆಂದೇ ಅರ್ಥವಾಗಲಿಲ್ಲ. ಅದೇ ಹಳೇ ವಿಷಯಗಳಾದ ಪಂಪ, ಬಸವಣ್ಣ, ಕುಮಾರವ್ಯಾಸ, ಕುವೆಂಪು, ಕಾರಂತ - ಇವರ ಕೃತಿಗಳಲ್ಲಿ ಬರುವ ಸ್ತ್ರೀ ಪಾತ್ರಗಳು-ಒಂದು ಅಧ್ಯಯನ, ತೌಲನಿಕ ಅಧ್ಯಯನ ಎಂದೆಲ್ಲ ಹಳೆಯ ವಿಷಯಗಳ ಕುರಿತು ಅಧ್ಯಯನ ಮಾಡುವುದು ಯಾಕೋ ನನ್ನ ಮನಸಿಗೆ ಕಿರಿಕಿರಿ. ಹೊಸ ವಿಷಯದ ಬಗ್ಗೆ ಬರೆಯಬೇಕೆಂದು ಬಹಳ ಅನಿಸುತ್ತಿತ್ತು. ಅದೇ ಸಂದರ್ಭದಲ್ಲಿ ಜೋಗಿಯವರ ‘ನದಿಯ ನೆನಪಿನ ಹಂಗು’ ಕಾದಂಬರಿ ಓದುತ್ತಿದ್ದೆ. ತುಂಬಾ ಇಷ್ಟವಾಯಿತು. ಮಡುವುದಾದರೆ ಜೋಗಿಯವರ ಕೃತಿಗಳ ಬಗ್ಗೇ ಅಂತ ನಿರ್ಧರಿಸಿದೆ. ನಮ್ಮ ಸರ್ ಹತ್ತಿರ ವಿಷಯ ಪ್ರಸ್ತಾಪಿಸಿದೆ. ಅವರು ಬೇರೆ ಬೇರೆ ವಿಷಯ ಹೇಳಿದರೂ ನನಗೆ ಒಪ್ಪಲು ಮನಸ್ಸಾಗಲಿಲ್ಲ.
ಜೋಗಿಯವರೂ ಅವರ ಕೆಲವು ಪುಸ್ತಕ ಕಳುಹಿಸಿಕೊಟ್ಟರು.
ಆದರೆ ನನಗೆ ಹೇಗೆ ಬರೆಯಬೇಕು? ಯಾವ ವಿಷಯ ಮುಖ್ಯವಾಗಿಸಿ ಬರೆಯಬೇಕೆಂದು ಒಂದೂ ತಿಳಿಯಲಿಲ್ಲ. ನಮ್ಮ ಮಾರ್ಗದರ್ಶಕರ ಬಳಿ ಕೇಳಿದರೆ "ನೀವು ಮೊದಲು ಬರೆದು ಮುಗಿಸಿ ಮತ್ತೆ ಅದಕ್ಕೆ ಕಾಮೆಂಟ್ ಮಾಡ್ತೇನೆ" ಎಂದು ಹೇಳಿದರು. ಅದೇ ಸಮಯಕ್ಕೆ ಸರಿಯಾಗಿ ಡೆಲ್ಲಿಗೆ ಬರಬೇಕಾಯಿತು, ನನ್ನ ಉದಾಸೀನವೂ ಸೇರಿತು. ಎಂಫಿಲ್ ಹೆಳೆಯಲ್ಲಿ ಊರಲ್ಲಿ ಎರಡೆರಡು ತಿಂಗಳು ಕಳೆದರೂ ಒಂದು ಅಕ್ಷರ ಮುಂದೆ ಸಾಗಲಿಲ್ಲ. ಡೆಲ್ಲಿಗೆ ಬಂದೆ. ಹಾಗೇ ಎಂಫಿಲ್ ಮೂಲೆಯಲ್ಲಿ ದೂಡುತ್ತಾ ಬಂದೆ.
ಕೊನೆಗೆ ಏಪ್ರಿಲ್‌ಗೆ ಪ್ರಬಂಧ ಕೊಡದೇ ಹೋದರೆ ಕ್ಯಾನ್ಸಲ್ ಆಗುತ್ತದೆ ಎಂಬ ಪತ್ರ ನನ್ನ ಕೈ ಸೇರಿದ ಮೇಲೆ ಚುರುಕುಮುಟ್ಟಿತು. ಇನ್ನು ಮುಗಿಸದೇ ಇದ್ದರೆ ನನಗೇ ಅವಮಾನ ಎಂದು ತೀರ್ಮಾನಿಸಿ ಊರಿಗೆ ಹೋದೆ.
ಮನೆಯಲ್ಲಿದ್ದರೆ ಅವರಿವರನ್ನು ಕಾಮೆಂಟ್ ಮಾಡುತ್ತಾ ತೋಟ ಸುತ್ತಾಡುತ್ತಾ, ನಕ್ಷತ್ರ ಹಣ್ಣು, ಗೇರು ಹಣ್ಣು ತಿನ್ನುತ್ತಾ ಮದುವೆ, ಮುಂಜಿ ಎಟೆಂಡ್ ಮಡುತ್ತಾ ಟೈಮ್ ಹಾಳುಮಾಡುತ್ತಾನೆಂದು ನಾನು ಸೀದಾ ನನ್ನ ಆತ್ಮೀಯ ಗೆಳತಿ ದಿವ್ಯಳ ಮನೆಗೆ ಹೋದೆ. ಜೋಗಿಯವರ ‘ಯಾಮಿನಿ’ ಕಾದಂಬರಿಯ ಹೀರೋ ಚಿರಾಯು ಮೊಬೈಲ್ ರೇಂಜ್ ಸಿಗದ ಕಡೆಗೆ ಹೋಗಿ ಬರೆಯುತ್ತಾನೆ. ಹಾಗೆ ನಾನೂ ಸುಮರು ೨ ತಿಂಗಳು ತಪಸ್ಸಿಗೆ ಕುಳಿತ ಹಾಗೆ ಗೆಳತಿ ಮನೆಯ ಕಂಪ್ಯೂಟರ್ ಮುಂದೆ ಕುಳಿತು ಬರೆಯ ತೊಡಗಿದೆ. ಆಕೆ ಪತಿ ಧನಂಜಯ್ ಸರ್ ವಿಷಯಕ್ಕೆ ಸಂಬಂಧಿಸಿದಂತೆ ಬಹಳ ಸಹಾಯ ಮಾಡಿದ್ದರು.
ಅದೇನು ಕಾಕತಾಳಿಯವೋ ಗೊತ್ತಿಲ್ಲ! ನಾನು ಜೋಗಿಯವರ ಕೃತಿಗಳನ್ನು ಹಿಡಿದು ಅರ್ಥವಾಗದೇ ಒದ್ದಾಡುತ್ತಿದ್ದಾಗ ಸಮಯ, ಸರಿಯಾಗಿ ಅವರ ಪುಸ್ತಕಗಳಿಗೆ ವಿಮರ್ಶೆ ಬರೆಯ ತೊಡಗಿದ್ದವರು ಹಿರಿಯರಾದ ಬೆಳ್ಮಣ್ ಕಾಲೇಜಿನಲ್ಲಿ ಪ್ರಿನ್ಸಿಪಾಲರಾದ ಡಾ.ಜನಾರ್ದನ ಭಟ್ ಅವರು. ಸಾಹಿತ್ಯದ ಕುರಿತ ಹಾಗೆ ಅವರಿಗಿರುವ ಪಾಂಡಿತ್ಯ ಜೊತೆಗೆ ಅವರ ಸರಳತನ ನೋಡಿ ಬೆರಗಾಗಿದ್ದೆ. ನನ್ನ ವಿಷಯದ ಕುರಿತ ಹಾಗೆ ತುಂಬ ಸಲಹೆ ನೀಡಿದರು. ನಮ್ಮ ಅಧಿಕೃತ ಮಾರ್ಗದರ್ಶಕರಿಗೆ ಬರೆದ ವಿಷಯವನ್ನು ತೋರಿಸಿ ಓಕೆ ಮಾಡಿಸಿ ಅಂತೂ ಇಂತೂ ನನ್ನ ಕೆಲಸ ಮುಗಿಸಿ ಬಂದೆ.
ನಾನು ಬರೆದದ್ದರಲ್ಲಿ ಹಲವು ತಪ್ಪುಗಳಿರಬಹುದು. ಅದನ್ನೆಲ್ಲ ಮನ್ನಿಸಿ ಹಂಪಿಯವರು ನನಗೆ ಎಂಫಿಲ್ ಪದವಿ ನೀಡಬಹುದೇ ಎಂಬ ನಿರೀಕ್ಷೆಯಲ್ಲಿ ಈಗ ಕಾಯುತ್ತಿದ್ದೇನೆ.
ಈ ಎಲ್ಲ ಕೆಲಸದಿಂದ, ಮನೆಗೆ ಹೋಗಿ ಬಂದ ಕುಶಿಯಿಂದ ಬ್ಲಾಗಿಗೆ ಬರೆಯಲು ಅಕ್ಷರಗಳು ನಿಧಾನವಾಗ ಸಾಗುತ್ತಿದೆ ಎಂಬ ನೆವನವನ್ನು ನಿಮ್ಮ ಮುಂದಿಡುತ್ತಿದ್ದೇನೆ.

17 March, 2009

ವಿಚಾರ ಸಂಕಿರಣ ಎಂಬ ಹರಕೆ.....

ಕಾಲೇಜು ದಿನಗಳ ನಂತರ ಅಪ್ಪಟ ಸಾಹಿತ್ಯಿಕವಾದ, ಥಿಯರಿಟಿಕಲ್ ಆದ ಭಾಷಣ ಕೇಳಿರಲಿಲ್ಲ. ಆದರೆ ಇತ್ತೀಚೆಗೆ ಮಂಗಳೂರಿನಲ್ಲಿ ಕಿಟೆಲರ ಬಗ್ಗೆ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಅನಿವಾರ್ಯ ಕಾರಣದಿಂದ ಹೊಗಲೇ ಬೇಕಾಯಿತು. ಶೈಕ್ಷಣಿಕ ಶಿಸ್ತಿನಿಂದ ದೂರವಾಗಿ ಅದಾಗಲೇ ೩ ವರ್ಷವಾಗುತ್ತಾ ಬಂತು. ಆದ್ದರಿಂದ ಇಂದು ಅಂಥ (ಬೋರಿಂಗ್)ಭಾಷಣ ಕೇಳುವಂಥ ತಾಳ್ಮೆಯಾಗಲೀ ಆಸಕ್ತಿಯಾಗಲೀ ಕಡಿಮೆಯಾಗುತ್ತಿದೆ.
ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಎಂದು ಹೆಸರಿದ್ದರೂ ಅಲ್ಲಿ ಯಾವ ಬಿಳಿ ಅಥವಾ ಕರಿ ತಲೆಗಳು ಕಾಣಿಸಲಿಲ್ಲ. (ವಿದೇಶಗಳಿಗೆ ಆಗಾಗ ಸರಕಾರಿ ಯಾ ಸಂಸ್ಥೆಗಳ ಖರ್ಚಿನಲ್ಲಿ ಭೇಟಿ ನೀಡುವ ನಮ್ಮ ವಿಧ್ವಾಂಸರಿಗೇ ಹಾಗೆ ಸಂಭೋಧಿಸಿರಬಹುದೇ?) ಸಂಯೋಜಕರು ಮತ್ತು ಭಾಷಣ ಕೊರೆಯುವವರ ಹೊರತಾಗಿ ನನ್ನಂತೆ ಅನಿವಾರ್ಯಕ್ಕೆ ಹೋದವರನ್ನು ಬಿಟ್ಟು ಆಸಕ್ತಿ ಇರುವ ಯಾವ ತಲೆಗಳೂ ಅಲ್ಲಿರಲಿಲ್ಲ.
ಕನ್ನಡದಲ್ಲಿ ಮೊದಲಿಗೆ ನಿಘಂಟು ರಚಿಸಿದವರು ಕಿಟೆಲ್ ಎಂದು ಸಣ್ಣ ತರಗತಿಯಿಂದಲೂ ಕಲಿತ, ಕೇಳಿದ ವಾಕ್ಯದ ಹೊರತಾಗಿ ಅಲ್ಲಿ ಮಂಡಿತವಾದ ಭಾಷಣದಿಂದೇನೂ ಎಫ್ಫೆಕ್ಟ್ ಆಗಲಿಲ್ಲ. ಕಾರಣ ಇಷ್ಟೇ- ಅಲ್ಲಿ ಬಂದವರೆಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ದೊಡ್ಡ ಮಂಡೆಯವರು! ನಾಲ್ಕು ಪುಸ್ತಕಗಳನ್ನಿಟ್ಟು ತಯಾರಿಸಿದ ಪ್ರಬಂಧಗಳು. ಒಂದಿಬ್ಬರಂತೂ ಪೇಪರ್ ಪ್ರೆಸಂಟೇಶನ್ ಅಂದರೆ ಪಕ್ಕಾ ಪೇಪರ್ ಮುಂದಿಟ್ಟು ಸ್ಪೀಡಾಗಿ ಓದುತ್ತಿದ್ದರು. (ಸಣ್ಣ ತರಗತಿಯಲ್ಲಿ ಮೇಷ್ಟ್ರು ಒಬ್ಬೊಬ್ಬರನ್ನೇ ನಿಲ್ಲಿಸಿ ಪಾಠ ಓದಿಸುತ್ತಿದ್ದುದು ನೆನಪಾಯಿತು.) ಅನುಸ್ವಾರ, ವಿಸರ್ಗ, ಬಿಂದು ಹೀಗೆ ಹಲವು ಶಬ್ದಗಳು ಕೂತು ತೂಕಡಿಸುತ್ತಿದ್ದ ನನ್ನ ತಲೆಗೆ ಬಡಿಯುತ್ತಲೇ ಇತ್ತು. ವರ್ಷಗಟ್ಟಲೆ ಪಾಟ ಹೇಳಿಕೊಡುತ್ತಿದ್ದ ಮೇಷ್ಟ್ರುಗಳಿಗೆ ತಾವು ಓದಿ ಅಧ್ಯಯನ ಮಾಡಿದ ವಿಷಯದಲ್ಲಿ ನಾಲ್ಕು ಪಾಯಿಂಟ್ ಇಟ್ಟು ನೆರೆದಿದ್ದ ಹತ್ತು ಜನರ ಮುಂದೆ ಹೇಳಲು ಸಾಧ್ಯವಿಲ್ಲವೆ? ಬೇಸರವಾಯಿತು.
ಯಾಕೆ ಶಿಕ್ಷಣ ಸಂಸ್ಥೆಯವರು ಅಷ್ಟೆಲ್ಲಾ ಖರ್ಚುಮಾಡಿ ಅಂತಹ ಇಂಟರ್ ನ್ಯಾಶನಲ್ ಸೆಮಿನಾರುಗಳನ್ನು ಇಡುತ್ತರೋ? ಅಷ್ಟು ಹೊತ್ತು ಕೂತು ಊಟ ಮಾಡಿ ಬಂದ ನನಗೆ ಅರ್ಥವಾಗಲಿಲ್ಲ.
ಕನ್ನಡ ಸಾಹಿತ್ಯಕ್ಕೆ ಅಪಾರವದ ಕೊಡುಗೆ ನೀಡಿದ ಕಿಟೆಲರ ಬಗ್ಗೆ ಗೌರವ ಇದೆ.(ಆತನ ಕೊಡುಗೆಯ ಹಿಂದೆ ಸಾಕಷ್ಟು ಒತ್ತಡದ, ಆದೇಶದ ಅನಿವಾರ್ಯ ಕಾರಣಗಳಿದ್ದವು,) ಆದರೆ ಇಂದು ಇಂತಹ ಸೆಮಿನಾರ್ ಗಳನ್ನು ಮಾಡುವುದು ಎಷ್ಟು ಪ್ರಸ್ತುತ? ಕಿಟೆಲರ ಸಾಧನೆಯನ್ನು ನಾಲ್ಕು ಜನರಿಗೆ ತಲಪಿಸುವ ಕೆಲಸ, ಆತನ ಹಾದಿಯಲ್ಲಿ ಸಾಗುವ ಪ್ರಯತ್ನ ಹೀಗೆ ಹಲವಾರು ಉತ್ತರಗಳು ಬರಬಹುದು. ಆದರೆ ಅಂತರ್ಜಾಲ ಇರುವ ಇಂದಿನ ಸಂದರ್ಭದಲ್ಲಿ ಆ ಕೆಲಸಗಳೆಲ್ಲ ಕಾರ್ಯರೂಪಕ್ಕೆ ಖಂಡಿತಾ ಬರುವುದಿಲ್ಲ. ಅಲ್ಲದ ಅಲ್ಲಿಗೆ ಬಂದವರೆಲ್ಲ ಕೂದಲು ಬೆಳ್ಳಗಾದವರು, ಭಾಷಣ ಮಾಡಿದವರೂ ಅವರ ಹೊತ್ತಿಗೆ ಬಂದು ತಮ್ಮ ಕೆಲಸವಾದ ನಂತರ ಕಳಚಿಕೊಂಡವರೇ.
ಇಂತಹ ಕಾರ್ಯಕ್ರಮ ಮಾಡಲು ಶೈಕ್ಷಣಿಕ ಸಂಸ್ಥೆಗಳಿಗೆ ಒಂದಷ್ಟು ದುಡ್ಡು ಬರುತ್ತದೆ. ಬ್ಯಾಂಕ್ ನವರೂ ದಾನ ಮಾಡುತ್ತಾರೆ. ಅದರಲ್ಲಿ ಸ್ವಲ್ಪ ಹಣ ಹೀಗೆ ಖರ್ಚು ಮಾಡಿದರೆ, ಸ್ವಲ್ಪ ಈಗಾಗಲೇ ತುಂಬಿದ ಕಿಸೆಗಳಿಗೆ ಸೇರುತ್ತವೆ. ಮರುದಿನ ಪೇಪರಿನಲ್ಲಿ ಭಾಷಣ ಮಾಡಿದ, ಸಭಾ ಕಾರ್ಯಕ್ರಮದ ಫೋಟೋ, ಮ್ಯಾಟರ್ ನೊಂದಿಗೆ ಮುಕ್ತಾಯವಾಗುತ್ತದೆ.
ನಮ್ಮ ಸಮಾಜದಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಓದಲು ದುಡ್ಡಿಗಾಗಿ ಕಷ್ಟಪಡುತ್ತರೋ, ಲೆಕ್ಕ ಸಿಕ್ಕದು. ಅಂತಹ ವಿದಾರ್ಥಿಗಳಿಗಾದರು ಈ ದುಡ್ಡನ್ನು(ಕಿಟೆಲರ ಹೆಸರಿನಲ್ಲಿ) ನೀಡಿದರೆ ಅವರು ಮನಪೂರ್ವಕವಾಗಿ ನಮಿಸಬಹುದು. ಕುತೂಹಲಕ್ಕಾದರೂ ಕಿಟೆಲರ ಸಾಧನೆಯನ್ನು ಗುರುತಿಸುತ್ತಿದ್ದರೋ... ಆದರೇನು ಮಾಡುವುದು ಇದನ್ನೆಲ್ಲ ಹೇಳುವವರಾರು? ಹೇಳಿದರೆ ಮಾಡುವವರಾರು?
ಕೊನೆಯಲ್ಲಿ ಮುಖ್ಯಾಂಶ:-ಅಷ್ಟು ವಯಸ್ಸಾದರೂ, ತನ್ನ ಸಣ್ಣ ದೇಹದ ಪುಟು ಪುಟು ಹೆಜ್ಜೆಯಿಡುತ್ತಾ ಸ್ಟೇಜಿಗೆ ಬಂದು ಮೈಕ್ ಮುಂದೆ ನಿಂತು ಭಾಷಣ ಮಾಡಿದ ಶ್ರೀನಿವಾಸ ಹಾವನೂರರ ಅಗಾಧ ಪಾಂಡಿತ್ಯಕ್ಕೂ ಚುರುಕು ನಡಿಗೆಗೂ ಬೆರಗಾದೆ!!!